Wednesday, January 22, 2020

ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನ್ನೆತ್ ಆಂಡರ್ಸನ್ ಕಥೆಗಳು

ಪುಸ್ತಕ: ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನ್ನೆತ್ ಆಂಡರ್ಸನ್ ಕಥೆಗಳು
ಲೇಖಕ: ಕೆನ್ನೆತ್ ಆಂಡರ್ಸನ್ 
ಕನ್ನಡ ಅನುವಾದ: ಸಾಕ್ಷಿ 
ಪ್ರಕಟಣೆ: ಆಕೃತಿ ಪುಸ್ತಕ 
ಬೆಲೆ: ೨೭೫/-

ಪುಸ್ತಕ ಓದುತ್ತಿರುವಾಗ ಲೇಖಕನ ಸ್ಥಾನದಲ್ಲಿ ಸ್ವತಃ  ನಾವೇ ಇದ್ದೇವೆ ಎನ್ನುವಷ್ಟು ಸ್ವಾರಸ್ಯಕರವಾಗಿ ಕೆನ್ನೆತ್ ಬರೆದಿದ್ದಾರೆ.  ದೂರದ ಬೆಟ್ಟದಡಿಯಲ್ಲಿ ಸಾಂಬಾರ್ ಒಂದರ ಎಚ್ಚರಿಕೆ ಕೂಗು ಕೇಳಿಸಿತು ಎಂದೊಡನೆ, ಲೇಖಕನ ಹಾಗೆ ನಮ್ಮ ಎದೆಯಲ್ಲೂ ಸಣ್ಣಗೆ ಡವ ಡವ! ಅಷ್ಟರಮಟ್ಟಿಗೆ ಬರವಣಿಗೆ ಪರಿಣಾಮಕಾರಿಯಾಗಿದೆ.  ನರಭಕ್ಷಕ ಸಿಗದೇ ಇದ್ದಾಗ ಅಥವಾ ಹೊಂಚು ಹಾಕಿ ಕಾಯುವಾಗಿನ ವಿವರಣೆಯನ್ನು ಓದಿಯೇ ಸವಿಯಬೇಕು. ಕಾಡಿನಲ್ಲಿ ಸಿಗುವ ಸಣ್ಣ ಪುಟ್ಟ ಅನುಭವಗಳಿಂದ ಸಿಗುವ ಅತಿ ಚಿಕ್ಕ ಸಂಗತಿಗಳಿಂದ ಹಿಡಿದು, ಅಪರೂಪದ ಮಹಶೀರ್ ಮೀನಿನ ಬಗ್ಗೆಯೂ ಸಾಕಷ್ಟು ಮಾಹಿತಿ ದಾಖಲಾಗಿದೆ. ಕಾಡನ್ನು ಪ್ರೀತಿಸುವ ಯಾರೇ ಆದರೂ ಈ ಪುಸ್ತಕವನ್ನು ಓದದೇ ಇರಲಾರರು. ಅಂತ ದಟ್ಟವಾದ ಕಾಡು ನಿಜವಾಗಿಯೂ ಬೆಂಗಳೂರಿನ, ಹಾಗು ಚಿತ್ರದುರ್ಗದ ಸಮೀಪ ಇತ್ತೇ? ಎನ್ನುವಷ್ಟು ಭೌಗೋಳಿಕ ವಿವರಣೆ, ಹಳ್ಳಿಗಳ ಚಿತ್ರಣ ಎಲ್ಲವೂ ಇದೆ. ತುಂಬಾ ಅಪರೂಪದ ಕಾಡಿನ ಡಾಕ್ಯುಮೆಂಟರಿ ಎನ್ನಬಹುದು. 

ಇನ್ನು ಸಾಕ್ಷಿ ಅವರ ಅನುವಾದದ ಬಗ್ಗೆ ಹೇಳುವುದಾದರೆ, ಅನುಭವವಿಲ್ಲದ ನರಭಕ್ಷಕನ ಬೇಟೆ ಅಥವಾ  ಕಾಡಿನ ಬಗ್ಗೆ ಇನ್ನೊಂದು ಭಾಷೆಯಲ್ಲಿ ಮೂಲದಂತೆಯೇ ಬರೆಯುವುದು ಅಷ್ಟು ಸುಲಭದ ಮಾತಲ್ಲ! (ಕೆಲ ಪತ್ರಿಕೆಗಳ ಸಂಪಾದಕರ ವಿನಂತಿಯ ಮೇರೆಗೆ ಕೆಲ ವೈಜ್ಞಾನಿಕ ಬರಹಗಳನ್ನು ಅನುವಾದಿಸಿದ ನನಗೆ ಇದರ ಗ್ರೌಂಡ್ ವರ್ಕ್ ಬಗ್ಗೆ ಅರಿವಿದೆ.) ಕೆಲವೊಂದು ಕಡೆ, ವಿಶೇಷವಾಗಿ ಡೊನಾಲ್ಡ್ ಮತ್ತು ಕೆನ್ನೆತ್ ನಡುವಿನ ಸಂಭಾಷಣೆ ಸ್ವಲ್ಪ ಗೊಂದಲಮಯವಾಗಿದ್ದು, ಹಾಗು ಒಂದು ಕಥೆಯಲ್ಲಿ ಬರುವ ನಾಯಿ ಕುಶ್ ಅನ್ನು 'ಕುಶ್ ಳು '(ಹೆಣ್ಣು ನಾಯಿಯಾದ್ದರಿಂದ ) ಎಂದು ಸಂಭೋದಿಸಿದ್ದು ಸ್ವಲ್ಪ ಮುಜುಗರವನ್ನುಂಟು ಮಾಡಿದ್ದು ಬಿಟ್ಟರೆ ಅಂತ ದೊಡ್ಡ ಲೋಪವೇನೂ ಕಂಡು ಬಂದಿಲ್ಲ. ಕೊನೆಯಲ್ಲಿ ಡೊನಾಲ್ಡ್ ಅವರ ಸಂದರ್ಶನವನ್ನು ಹಾಕಿದ್ದು 'ಓದುಗರು ಬಯಸಿದ್ದೂ ಹಾಲು ಅನ್ನ! ಲೇಖಕರು ಹೇಳಿದ್ದೂ ಹಾಲು ಅನ್ನ' ಅಂತಾಯಿತು :) 

ಸಲಹೆ:  ಇಡೀ ಪುಸ್ತಕದಲ್ಲಿ ಒಂದೇ ಒಂದು ರೇಖಾಚಿತ್ರ ಇಲ್ಲದ್ದು ಬೇಸರವನ್ನುಂಟು ಮಾಡಿತು. ಪುಸ್ತಕ ಮರುಮುದ್ರಣಗೊಂಡಲ್ಲಿ ರೇಖಾಚಿತ್ರ ಹಾಕಿ. ಹಾಗು ಅನುವಾದಕಿಯ ಇಮೇಲ್ ಐ ಡಿ ಇದ್ದರೆ ಪ್ರತಿಕ್ರಿಯಿಸಲು ಚೆನ್ನಾಗಿರುತ್ತಿತ್ತು. 

ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಬೇಕೆನಿಸಿದರೂ, ದಿನಕ್ಕೆ ಒಂದೊಂದು ಕಥೆ ಓದಿದರೆ ಹೆಚ್ಚು ಪರಿಣಾಮಕಾರಿ ಎಂದು ನನ್ನ ಅನಿಸಿಕೆ. ಕೆಲವೊಂದು ಕಥೆ ವಿಶೇಷವಾಗಿ ಅಂಬಿಲಿಗೊಳದ ದೊರೆ ಹಾಗು ಹೊಳಲ್ಕೆರೆಯ ನರಭಕ್ಷಕ ಅತಿ ರೋಮಾಂಚಿತ ಕಥೆಗಳು. ಓದಿದ ಮೇಲೆ ಇದೇ ಏಕೆ ಪುಸ್ತಕದ ಶೀರ್ಷಿಕೆಯಾಗಿದೆ ಎಂದು ಗೊತ್ತಾಗುತ್ತದೆ. 



ಧನ್ಯವಾದಗಳು 
ಅನುಪಮಾ ಕೆ ಬೆಣಚಿನಮರ್ಡಿ

Wednesday, January 15, 2020

ಪ್ರಬಂಧ: ಡೈರಿ ಎಂಬ ಟೈಮ್ ಮಷಿನ್!- Hosadigantha , 15th January 2020


ಡೈರಿ ಎಂಬ ಟೈಮ್ ಮಷಿನ್!

ಮಗ ಶಾಲೆಗೆ ಹೋಗಲು ಶುರು ಮಾಡಿದ್ದರಿಂದ ನನಗೆ ಸಿಗುವ ಅತ್ಯಮೂಲ್ಯ ಮೂರು ಗಂಟೆಗಳಲ್ಲಿ ಮಾಡದ ಕೆಲಸವೇ ಇಲ್ಲ. ಅದರಲ್ಲಿ ಮನೆಯ ಸ್ವಚ್ಛತಾ ಅಭಿಯಾನವೂ ಒಂದು. ಹೀಗೆ ಸ್ವಚ್ಛ ಮಾಡುತ್ತಿರಬೇಕಾದರೆ ಒಂದು ಪುಸ್ತಕವನ್ನು ಟೇಪಿನಿಂದ ಐದಾರು ಸುತ್ತು ಸುತ್ತಿ ಭದ್ರಪಡಿಸಿತ್ತು. ಇದೇನು? ಎಂದು ನೋಡುತ್ತಿರಬೇಕಾದರೆ ನನ್ನ ಮನಸ್ಸು, "ಮಂಗ್ಯಾ, ಇದ ನಿನ್ನ ಡೈರಿ. ನೀನ ಅದನ್ನ ಪ್ಯಾಕ್ ಮಾಡಿದ್ದ ಮರತ ಹೋತ್ ಏನು?" ಎಂದು ರೊಚ್ಚಿಗೆದ್ದಾಗ; ಈಗೆಲ್ಲಾ ನನ್ನ ಭಾವನೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಕರ್ನಾಟಕ ಜನತೆಗೆ ಡಂಗುರ ಬಡಿಯುವ ನಾನು ಈ ಡೈರಿಯಲ್ಲಿ ಹಂತಾದ್ದೇನು ಬರ್ದಿದ್ದೀನಿ ಎಂದು ಸಂಶಯ ಮೂಡಿತು! ತೆಗೆದು ನೋಡಿದರೆ ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ ಹೂತು ಹೋದೆನು. ನನಗೆ ಸಿಕ್ಕ ಮೊದಲ ಉಡುಗೊರೆ, ಅಮ್ಮ ಬಯ್ದಿದ್ದು, ಅಣ್ಣ ನನ್ನ ರಕ್ಷಣೆಗಾಗಿ ನಿಂತಿದ್ದು, ಅಕ್ಕ ತನ್ನ ಶಾಲೆಗೆ ನನ್ನನ್ನು ಕರೆದೊಯ್ದಿದ್ದು, ಜೀವಮಾನದಲ್ಲೇ ಮೊದಲು ನೋಡಿದ ಹಾವು ಹಾಗು ಅದರ ವರ್ಣನೆ, ಶಾಲೆ ಮುಂದೆ ಇರುವ ಮೊಸಳೆ ಗಿಡದ ಆಟ, ಕೆಂಪವಲಕ್ಕಿ ಆಸೆಗೆ ಯಾರಿಗೂ ಹೇಳದೆ ಕೇಳದೆ ಗೆಳತೀ ಮನೆಗೆ ಹೋಗಿದ್ದು, ಕದ್ದ ಪೆನ್ಸಿಲಿನ ಕಥೆ, ತಂದೆ ಬರೆದುಕೊಟ್ಟ ಸ್ವಾತಂತ್ರ್ಯೋತ್ಸವದ ಭಾಷಣದ ಚೀಟಿಗಳು, ಋತುಚಕ್ರದ ಬಗ್ಗೆ ಗೆಳತಿಯರೊಂದಿಗೆ ಗುಸುಗುಸು ಮಾತನಾಡಿದ ಚರ್ಚೆಗಳು, ಶಾಲೆ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ತಯಾರಿಸಿದ ಟಿಪ್ಪಣಿಗಳು, rank ಬರದೇ ಹೋದಾಗ ಮಾಡಿದ ಭೀಷಣ ಪ್ರತಿಜ್ಞೆ ಇತ್ಯಾದಿ. ಓದುತ್ತಿರಬೇಕಾದರೆ ಡೈರಿ ಬರಿಯ ಒಂದು ಪುಸ್ತಕ ಎನಿಸದೇ ನಮ್ಮ ಭೂತಕಾಲವನ್ನು ತೋರಿಸುವ ಟೈಮ್ ಮಷಿನ್ ನಂತೆ ಭಾಸವಾಗತೊಡಗಿತು! ಅದಕ್ಕೇ ಆ ಟೈಮ್ ಮಷಿನ್ ನನ್ನು ನಾನೊಬ್ಬಳೇ ಬಳಸಬೇಕೆಂದೇ ಅದನ್ನು ಭದ್ರಪಡಿಸಿ ಜೋಪಾನವಾಗಿ ಇಟ್ಟಿದ್ದು!

ಆದರೆ ಈಗೀಗ ಡೈರಿ ಭದ್ರವಾಗಿಡಲು ಪುಸ್ತಕಕ್ಕೆ ಪುಟ್ಟ ಕೀಲಿ ಇರುವಂತಹವು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಷ್ಟೇ ಏಕೆ? ತರತರದ ವಿನ್ಯಾಸವುಳ್ಳ ಡೈರಿ, ಉಡುಗೊರೆ ಕೊಡಲೆಂದೇ ಇರುವ ಡೈರಿ, ಮೇಲಿನ ಹೊದಿಕೆಗೆ ಕಟ್ಟುವ ವಿನ್ಯಾಸ, ಚರ್ಮದ ಹೊದಿಕೆ ಇರುವಂತದ್ದು, ಮುಚ್ಚಿದ ಮೇಲೆ ಪುಟ್ಟ ಬಟನ್ ನಿಂದ ಭದ್ರಪಡಿಸುವಂತದ್ದು ಇತ್ಯಾದಿ. ನನಗೆ ಮಾತ್ರ ಡೈರಿ ಎಂದರೆ ಮೊತ್ತ ಮೊದಲು ನೆನಪಾಗುವುದೇ ಜೀವ ವಿಮೆ ಏಜಂಟರು ಕೊಡುವ ಡೈರಿ ಅಲಿಯಾಸ್ ಎಲ್ ಐ ಸಿ ಡೈರಿ ಎನ್ನಬಹುದು! ನಾನು ಯಾವತ್ತೂ ಡೈರಿ ಕೊಂಡಿದ್ದೇ ಇಲ್ಲ. ಅದೂ ಅಲ್ಲದೆ ಚಿಕ್ಕವಳಿದ್ದಾಗ ದಿನಚರಿ ಬರೆಯುವುದೊಂದೇ ಗೊತ್ತಿತ್ತೇ ವಿನಃ ಅದನ್ನು ಇಂತಹದ್ದೇ ಪುಸ್ತಕದಲ್ಲಿ ನಮೂದಿಸಬೇಕೆಂದು ಗೊತ್ತಿರಲಿಲ್ಲ. ಈಗಲೂ ಈ ಅನಕೊಂಡದ ಬಂಧನದಲ್ಲಿ ಕುಳಿತ ಹೊತ್ತಿಗೆಯಲ್ಲಿ ನೂರಾರು ತರಹದ ಚಿಕ್ಕ ಚಿಕ್ಕ ವಿದ್ಯಾ ನೋಟಬುಕ್ ನ (ಶಾಲೆಗೆ ಉಪಯೋಗಿಸಿ ನಂತರ ಉಳಿದ ಖಾಲಿ ಹಾಳೆಗಳು ) ಮಾಸಿದ ಹಳದಿ ಬಣ್ಣದ ಹಾಳೆಗಳು, ಬರೆಯಬೇಕೆಂದಾಗ ಕೈಗೆ ಸಿಕ್ಕ ಖಾಲಿ ಹಾಳೆಗಳು, ಎಲ್ ಐ ಸಿ ಡೈರಿಗಳು, ಇನ್ನು ಕೆಲವು ಪರೀಕ್ಷೆ ಬರೆಯಲು ಬಳಸುತ್ತಿದ್ದ ಸ್ವಲ್ಪ ದೊಡ್ಡದಾದ ಪೇಪರುಗಳು, ಕೆಲವು ಖಾಲಿ ಇದ್ದರೆ ಇನ್ನು ಕೆಲವುದರ ಹಿಂದೆ ಅಮ್ಮ ಬಿಡಿಸಿದ ಗಂಟು ಗಂಟಾದ ರಂಗೋಲಿಗಳೋ ಅಥವಾ ನಾನು ಬರೆದ ಬೀಜಗಣಿತದ ಲೆಕ್ಕಗಳೋ, ತಿದ್ದಿ ತೀಡಿದ ಮಾನವನ ಜೀರ್ಣಾಂಗವ್ಯೂಹ! ಇನ್ನು ಏನೇನೋ! ಹೀಗಾಗಿ ಡೈರಿಯಿಂದ  ಬರೀ ನಮ್ಮ ಇತಿಹಾಸ ಅಷ್ಟೇ ಅಲ್ಲದೆ ನಮ್ಮ ನಮ್ಮ ಕಲೆ, ಗಣಿತ, ವಿಜ್ಞಾನದ ಆಗಿನ ಪರಿಚಯವೂ ಬೋನಸ್ ನಂತೆ ಸಿಗುತ್ತದೆ! ಅದಕ್ಕೇ ಅಲ್ಲವೇ ಇದು ಅಪ್ಯಾಯಮಾನವಾದುದು. ವಿಶ್ವ ಮಹಾಯುದ್ಧ ನಡೆಯುತ್ತಿದ್ದಾಗ ಆನ್ನೇ ಫ್ರಾಂಕ್ ಎಂಬ ಹುಡುಗಿ ತಮ್ಮ ಇಡೀ ಕುಟುಂಬ ನಾಜಿಗಳಿಂದ ಬಚ್ಚಿಟ್ಟುಕೊಂಡು ಕುಳಿತಾಗ ತನ್ನ ಡೈರಿ ಬರೆಯದೇ ಹೋಗಿದ್ದರೆ ಆವತ್ತಿನ ಆ ಚಿತ್ರಣ ನಮಗೆ ಸಿಗುತ್ತಿತ್ತೇ? ದಿನಪತ್ರಿಕೆಯಲ್ಲಿ ಮಹಾಯುದ್ಧದ ಬಗ್ಗೆ ವರದಿ  ಓದುವುದಕ್ಕೂ ಹಾಗೂ ಹದಿಮೂರು ವರ್ಷದ ಬಾಲಕಿಯ ಭಾವನೆಗಳಿಂದ ಯುದ್ಧದ ಬಗ್ಗೆ ತಿಳಿದುಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ಆ ಡೈರಿಯ ಪುಸ್ತಕ ಮುದ್ರಣಗೊಂಡು ಮಾರಾಟವಾದ ದಾಖಲೆಯೇ ತೋರಿಸುತ್ತದೆ. 

ಅಷ್ಟಕ್ಕೂ ಡೈರಿ ಎನ್ನುವುದು ನಮ್ಮ ದಿನದ ಆಗುಹೋಗುಗಳೋ ಅಥವಾ ಭಾವನೆಗಳನ್ನಷ್ಟೇ ನಮೂದಿಸದೆ ಕೆಲವೊಂದು ಬಾರಿ ಅಂಕಿ ಅಂಶಗಳನ್ನು ನಮೂದಿಸಿದ್ದಿದೆ. ಉದಾಹರಣೆಗಾಗಿ ನಾವು ಸಾಕಿದ ಬೆಕ್ಕು ಯಾವ ದಿನ ಎಷ್ಟು ಮರಿ ಹಾಕಿತು, ಆ ವರ್ಷದ ಗರಿಷ್ಠ ಮಳೆ, ಹೊಲದಲ್ಲಿ ಎಷ್ಟು ಚೀಲ ಕಡಲೆ, ಸೋಯಾಬೀನ್ ಬಂತು, ಎಮ್ಮೆ ಕರು ಹಾಕಿದ್ದು ಹಾಗು ಆ ಕರುವಿಗೆ ಹಾಲು ಕುಡಿಯಲು ಬಾರದೇ ಇದ್ದಾಗ ನಮ್ಮ ರೈತ ದಿನಕ್ಕೆ ಎಷ್ಟು ಬಾಟಲಿ ಹಾಲು ಕುಡಿಸಿದ! ಹೀಗೆ ಹತ್ತು ಹಲವಾರು. ಇನ್ನು ನನ್ನ ಅಮೆರಿಕೆಯ ಪ್ರವಾಸದ ಬಗ್ಗೆ ಡೈರಿಯಲ್ಲಿ ಬರೆಯುತ್ತಿದ್ದೇನೆ ಎಂದು ನನ್ನ ಅಪ್ಪನಿಗೆ ಹೇಳಿದಾಗ, ಅವರು 'ಬರೆದಿಡು, ಅದೊಂದು ಪ್ರವಾಸ ಕಥನವಾಗಬಹುದು' ಎಂದಿದ್ದರು. ಹೀಗೆ ಏನು ಬರೆಯುತ್ತಿದ್ದೇವೆ ಎಂಬುದರ ಆಧಾರವಾಗಿ ಡೈರಿ ಬರೆಯುವಿಕೆಯಲ್ಲಿ ಹತ್ತು ಹಲವಾರು ಪ್ರಕಾರಗಳಿವೆ ಎಂದು ಗೊತ್ತಾದದ್ದು ತೀರಾ ಇತ್ತೀಚಿಗೆ. ಅದೂ ನನ್ನ ಮಗ ಹುಟ್ಟಿದ ಮೇಲೆ ಅವನ ಆರೋಗ್ಯದಲ್ಲಿ ಏರುಪೇರಾದಾಗ ಅವನು ಏನು ತಿಂದ? ಎಷ್ಟು ಸಲ ಮೂತ್ರ ವಿಸರ್ಜಿಸಿದ ಎಂದೆಲ್ಲ ಬರೆದು ಅದನ್ನು ಡಾಕ್ಟರಿಗೆ ತೋರಿಸಿದೆ. ಅವರು "ಓಹ್ ನೀವು ಅವನ ಡಯಟ್ ಕಮ್ ಹೆಲ್ತ್ ಚಾರ್ಟ್ ಇಟ್ಟಿದ್ದೀರಾ? ನೀವೊಬ್ಬ ಮಾದರಿ ತಾಯಿ!" ಎಂದೆನ್ನುತ್ತಾ ಡೈರಿಯ ಹಿಂದೆ ಮುಂದೆ ಕಣ್ಣಾಡಿಸಿದರು. ಅದರಲ್ಲಿ ನನ್ನ ಗರ್ಭಧಾರಣೆ ಪರೀಕ್ಷೆಯಿಂದ ಶುರುವಾಗಿ ಮಗು ಮೊದಲ ಬಾರಿ ಒದ್ದಿದ್ದು, ಹುಟ್ಟಿದ ನಂತರ ಮೊದಲು ನಕ್ಕಿದ್ದು, ಬೋರಲು ಬಿದ್ದಿದ್ದು, ಮಣ್ಣು ತಿಂದಿದ್ದು, ಬೇಕು ಅಂತಲೇ ಚಿತ್ರ ಬರೆಯುವ ಹಾಗೆ ಮೂತ್ರ ವಿಸರ್ಜಿಸುವುದು! ಬರೆದಿದ್ದನ್ನು ನೋಡಿದ ಡಾಕ್ಟರಿಗೆ ತಲೆ ಸುತ್ತಿದಂತಾಗಿ ಇದಕ್ಕೆ ಪ್ರೆಗ್ನನ್ಸಿ ಜರ್ನಲ್ ಎನ್ನಬೇಕೋ? ಡಯಟ್ ಡೈರಿ ಎನ್ನಬೇಕೋ ಎಂದು ನಿರ್ಧರಿಸದೆ, ಪ್ರತಿಕ್ರಿಯಿಸದೆ ತಮ್ಮ ಪ್ರಿಸ್ಕ್ರಿಪ್ಷನ್ ಬರೆಯಲು ಮುಂದುವರಿಸಿದ್ದರು! ಆದರೆ ನನ್ನ ಗಮನ ಸೆಳೆದಿದ್ದು ಮಗನಿಗೆ ಶಾಲೆಯಲ್ಲಿ ಕೊಟ್ಟ ಶಾಲಾ ಡೈರಿ! ಮೂರು ವರ್ಷದ ಮಗು ಅದೇನು ಡೈರಿ ಬರೀತದ? ಬಹುಷಃ ಅದರಲ್ಲಿ ಹೋಮ್ ವರ್ಕ್ ಏನೆಂಬುದನ್ನು ತಿಳಿಸುತ್ತಾರೆ ಎಂದುಕೊಂಡಿದ್ದೆ.  ಕೆಲ ದಿನಗಳಲ್ಲೇ ಅದು ಬರಿ ಹೋಮ್ ವರ್ಕ್ ಗಷ್ಟೇ ಸೀಮಿತವಾಗಿರದೆ, "ಅವನು ದೋಸೆ ತಿನ್ನುತ್ತಿಲ್ಲ. ಬೇರೆ ಏನಾದರೂ ಡಬ್ಬಿಯಲ್ಲಿ ಹಾಕಿ ಕೊಡಿ!" "ನ್ಯಾಪಕಿನ್ ಮರೆಯದೆ ಕೊಟ್ಟು ಕಳಿಸಿ" ಎಂದೆಲ್ಲ ಬರೆದು ಕಳುಹಿಸತೊಡಗಿದರು. ಓಹೋ! ಇದರಲ್ಲಿ ಮಗುವಿಗೆ ಸಂಬಂಧ ಪಟ್ಟಿದ್ದನ್ನು ಬರೆಯಬೇಕೆಂದು ಅರ್ಥೈಸಿಕೊಂಡು ನಾನು ಹೀಗೆ ಬರೆದೆ, "ಮಗುವಿಗೆ ಡೈಪರ್ ಹಾಕಿಕೊಂಡು ಇರುವ ರೂಢಿ ಇಲ್ಲ. ಈಗ ಮಗು ಶಾಲೆಗೆ ಹೊಂದಿಕೊಂಡಿರುವುದರಿಂದ, ಅವನೇ ತನ್ನ ಭಾಷೆಯಲ್ಲಿ ನೈಸರ್ಗಿಕ ಕರೆಗಳ ಬಗ್ಗೆ ಸುಳಿವು ನೀಡುತ್ತಾನಾದ್ದರಿಂದ ಡೈಪರ್ ಅವಶ್ಯವಿಲ್ಲ ಎಂದುಕೊಳ್ಳುತ್ತೇನೆ! 'ಇಶ್ಶಿ' = ಮಲ ವಿಸರ್ಜನೆ! 'ಸುಸು ' = ಮೂತ್ರ ವಿಸರ್ಜನೆ! ದಯವಿಟ್ಟು ಅವನ ಭಾಷೆಯೊಂದಿಗೆ ಸಹಕರಿಸಿ!" ನಂತರ ಅವತ್ತು ಶಾಲೆಯಿಂದ ಮಗುವನ್ನು ಕರೆತರಲು ಹೋದರೆ, ಶಾಲಸಿಬ್ಬಂದಿ, "ಮೇಡಂ, ದಯವಿಟ್ಟು, ಡೈರಿಯಲ್ಲಿ ಮಲ, ಮೂತ್ರ ಎಂದೆಲ್ಲ ಬರೆಯಬೇಡಿ! ಏನಿದ್ದರೂ ನಮಗೆ ಮೌಖಿಖವಾಗಿ ತಿಳಿಸಿ!" ಎಂದು ವಿನಂತಿಸಿದಂತೆ ಶಬ್ದಪ್ರಯೋಗ ಮಾಡಿದರೂ ಪ್ರಕಟ ಪಡಿಸಿದ ಭಾವಪ್ರಯೋಗ ಮಾತ್ರ ನನಗೆ ಎಚ್ಚರಿಕೆ ನೀಡುವಂತಿತ್ತು! ಆ ಸಂಧರ್ಭಕ್ಕೆ ನನಗೆ ನೆನಪಾಗಿದ್ದು 'ಹ್ಯಾರಿ ಪಾಟರ್' ಎಂಬ ಚಿತ್ರದಲ್ಲಿದ್ದ 'ರಿಡಲ್ಸ್ ಡೈರಿ!' ಏಕೆಂದರೆ ಈ ಡೈರಿ ನಿರ್ಜೀವವಾಗಿರದೆ ಒಬ್ಬ ಜೀವಂತ ಮನುಷ್ಯನಂತೆ ನಾವು ಬರೆದುದಕ್ಕೆ ಸ್ಪಂದಿಸುತ್ತಿತ್ತು! ಅರ್ಥಾತ್ ಉತ್ತರವಾಗಿ ತನ್ನ ಪುಟದಲ್ಲಿ ತೋರಿಸುತ್ತಿತ್ತು. ಶಾಲೆಯವರು ಇಂಥ ಡೈರಿಯನ್ನು ಕೊಟ್ಟಿದಿದ್ದರೆ ನಾನೇ ಖುದ್ದಾಗಿ ಡೈರಿಯಿಂದ ನನ್ನ ಮಗನ ಎಲ್ಲ ಚಟುವಟಿಕೆಗಳನ್ನು ಕೇಳಿ ತಿಳಿಯಬಹುದಾಗಿತ್ತು! ಬರೀ ಅಷ್ಟೇ ಅಲ್ಲದೆ, ನನಗೆ ಬೇಕಾದ ಭೂತಕಾಲದ ದಿನಾಂಕವನ್ನು ಅದರಲ್ಲಿ ನಮೂದಿಸಿದರೆ ಅವತ್ತಿನ ದಿನಕ್ಕೆ ನನ್ನನ್ನು ಕರೆದುಕೊಂಡು ಹೋಗಿ ದೃಶ್ಯಗಳನ್ನೂ ತೋರಿಸುತ್ತಿತ್ತು! ಇರಲಿ, ಈಗ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳೋಣ. 

ನಾನಾ ಬಗೆಯ ಡೈರಿ ಬರೆಯುವ ಪ್ರಕಾರಗಳಿದ್ದರೂ, ಅದು ವ್ಯಕ್ತಿಯ ಯೋಚನಾಲಹರಿಯನ್ನು ತಿಳಿಸುತ್ತದೆಯೇ ಹೊರತು ಪ್ರಕಾರಗಳಿಗನುಗುಣವಾಗಿ ಅದೇ ತರಹ ಯೋಚಿಸಲಾಗುವುದಿಲ್ಲ. ಹೀಗಾಗಿ ಡೈರಿ ಬರೆಯುವುದರಲ್ಲಿ ಚಿಂತನೆ ಅಥವಾ ಬರವಣಿಗೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬಹುದು. ಒಂದು ಸಲ ನಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕಿರಿಯ ಇಂಜಿನಿಯರುಗಳಿಗೆ ತರಬೇತಿ ನೀಡುತ್ತಿದ್ದೆ. ವಿಷಯ ಹೊಸದು ಎನ್ನಿಸಿದರೆ ಟಿಪ್ಪಣಿ ಮಾಡಿಕೊಳ್ಳಲಿ ಎಂದು ಒಂದು ನೋಟ್ಬುಕ್ ಅನ್ನು ಕೂಡ ಎಲ್ಲರಿಗೂ ಕೊಟ್ಟಿದ್ದೆವು. ಆದರೆ ಒಬ್ಬ/ಳು  ಅಭ್ಯರ್ಥಿಯೂ ಅದನ್ನು ತೆರೆಯುವ ಗೋಜಿಗೆ ಹೋಗಲಿಲ್ಲ. ಇವರ ನೆನಪಿನ ಶಕ್ತಿ ಸಾಮರ್ಥ್ಯದ ಬಗ್ಗೆ ಸಣ್ಣ ಸಂದೇಹ ನನಗೆ. ಯಾಕೆ ಬರಿತಿಲ್ಲ ಎಂದು ಕೇಳಿದರೆ, "ಮ್ಯಾಮ್ ನೀವು ಹೇಗಾದರೂ ppt  ಶೇರ್ ಮಾಡುತ್ತೀರಲ್ಲವೇ? ಅಲ್ಲದೆ ನಮಗೆ ತಿಳಿಯದ ವಿಷಯಗಳನ್ನು ನೋಟ್ ಪ್ಯಾಡಲ್ಲಿ  ದಾಖಲಿಸಿಕೊಳ್ಳುತ್ತೇವೆ !" ಎಂದರು. ಹೊಸ ಪೀಳಿಗೆಯ ಹೊಸ ಶೈಲಿ ಎಂದು ಸುಮ್ಮನಾದರೆ; ಇವರ ನೋಟ್ ಪ್ಯಾಡ್ ಕಂಪ್ಯೂಟರಿನ ಪ್ರೊಸೆಸರ್ ನಲ್ಲಿಯೇ ಉಳಿಯಿತೇ ಹೊರತು ಇವರ ತಲೆಯ ಪ್ರೊಸೆಸರ್ ಗೆ ಹೋಗಿ ಮುಟ್ಟಲೇ ಇಲ್ಲ. ಅವರಿಗೆ ತಿಳಿಹೇಳಲು ಒಂದು ಇಂಜಿನಿಯರಿಂಗ್ ಉದಾಹರಣೆ ನೀಡಿದೆ. ವಿಜ್ಞಾನದಲ್ಲಿ ಅತಿ ಪ್ರಮುಖವಾದ ಟ್ರಾನ್ಸಿಸ್ಟರ್ ನ ಆವಿಷ್ಕಾರದ ವಿಷಯದಲ್ಲಿ ಇಬ್ಬರು ವಿಜ್ಞಾನಿಗಳು ಪೇಟೆಂಟ್ ಗೋಸ್ಕರ ಅರ್ಜಿ ಸಲ್ಲಿಸಿದರೂ ವಿಲಿಯಮ್ ಷೋಕ್ಲಿ ಎಂಬಾತ ತನ್ನ ಹತ್ತು ವರ್ಷದ ಪ್ರಯೋಗಗಳನ್ನು ಹಂತಹಂತವಾಗಿ ತನ್ನ ದಿನಚರಿಯಲ್ಲಿ ನಮೂದಿಸಿದ್ದ. ಅವನ ಡೈರಿ ಸಾಕ್ಷಿಯಂತೆ ಕಾರ್ಯನಿರ್ವಹಿಸಿ ಅವನಿಗೆ ಕೀರ್ತಿ ತಂದು ಕೊಡುವಲ್ಲಿ ಮುಖ್ಯ ಪಾತ್ರ ವಹಿಸಿತು ಎಂದು ಅವರಿಗೆ ಪ್ರೋತ್ಸಾಹಿಸಿದರೆ, ಒಂದಿಬ್ಬರು ಮಾತ್ರ ವಹಿಯಲ್ಲಿ ಅವತ್ತಿನ ದಿನಾಂಕ ಬರೆದರೇ ಹೊರತು ಉಳಿದವರು ನಾನೊಬ್ಬಳು ಶಿಲಾಯುಗದ ಮಾನವಿ ಇದ್ದಂತೆ ನನ್ನನ್ನು ದುರುಗುಟ್ಟುತ್ತಿದ್ದರು! 

ಕೆಲವರ ಪ್ರಕಾರ ಅವರ ಕಂಪ್ಯೂಟರೇ ಅವರ ಡೈರಿ. ಅದಕ್ಕೆ ಪಾಸ್ ವರ್ಡ್ ಇಟ್ಟರಾಯಿತು ಕೀಲಿ ಹಾಕಿದಂತೆ. ಆದರೆ ಕಂಪ್ಯೂಟರು ಹಾಳಾದರೆ? ಒಂದೊಮ್ಮೆ ಹಾಳಾಗದೇ ಇದ್ದರೂ ಕೂಡ ವಹಿಯಲ್ಲಿ ಬರೆದ ಹಾಗೆ ನಮ್ಮ ಆ ಬಾಲ್ಯದ ಬರವಣಿಗೆಯ ಸೊಗಸು, ಮೊದಲು ಬರೆದ ಶಬ್ದವನ್ನು ಹೊಡೆದು ಹಾಕಿ ನಂತರ ಬರೆದ ಶಬ್ದವನ್ನು ಓದುವಾಗ ಆ ದಿನಗಳ ನಮ್ಮ ವಿಚಾರಶೈಲಿ, ನಡುನಡುವೆ ಏನೋ ನೆನಪಾಗಿ ಅಲ್ಲಲ್ಲಿ ಚಿಕ್ಕ ಅಕ್ಷರಗಳಲ್ಲಿ ತೂರಿಸಿದ್ದ ಸಂಗತಿಗಳು, ಆಗ ಬಳಕೆಯಲ್ಲಿದ್ದ ಶಾಹಿ, ಪೆನ್ನು, ಆಗಿನ ಹಾಳೆಗಳು, ಭಾವನೆಗಳಿಗೆ ಶಬ್ದರೂಪವನ್ನು ನೀಡುವಾಗ ಬಿದ್ದ ಕಣ್ಣ ಹನಿಯಿಂದ ಶಾಹಿಯು ತನ್ನ ಸುತ್ತಮುತ್ತ ಹರಡಿದ್ದ ಗುರುತು! ಇಂಥ ಹಲವಾರು ನೆನಪುಗಳನ್ನು ಕಂಪ್ಯೂಟರ್ ನೀಡಬಲ್ಲುದೇ!? ಹೆಚ್ಚೆಂದರೆ ಬರೆದ ದಿನಾಂಕ, ವೇಳೆ, ಬಳಸಿದ ಲಿಪಿ, ಲಿಪಿಯ ಗಾತ್ರ, ಯಾವ ತರಹದ ಡಾಕ್ಯುಮೆಂಟ್ ಎಂಬ ತಾಂತ್ರಿಕ ಮಾಹಿತಿ ನೀಡಬಲ್ಲುದೇ ಹೊರತು ಭಾವನಾತ್ಮಕ ಮಾಹಿತಿಯನ್ನು ನೀಡಲು ಅಸಫಲವಾಗಿದೆ ಎಂದೇ ಹೇಳಬೇಕು. ಹೀಗಾಗಿ ಇದು ಟೈಮ್ ಮಷಿನ್ ಆಗದೆ ಹೇಳಿದ್ದನ್ನು ಕೇಳುವ ಒಂದು ಮಷಿನ್ ಎಂದಷ್ಟೇ ಹೇಳಬಹುದು. ನನ್ನ ವಿಚಾರಸರಣಿ ಇನ್ನೂ ಆಳದಲ್ಲಿ ಹುಗಿದು ಹೋಗಿತ್ತಾದರೂ ನನ್ನ ಫೋನ್ ಅಲಾರಾಂ ಹೊಡೆದುಕೊಂಡಾಗ (ಹೀಗೆ ಮುಳುಗಿಹೋಗಬಾರದೆಂದೇ ಇಟ್ಟ ಅಲಾರಾಂ!) ಮಗನ ಶಾಲೆ ಬಿಡುವ ಹೊತ್ತಾಯ್ತು ಎಂದು ಅವತ್ತಿನ ಸ್ವಚ್ಛತಾ ಕಾರ್ಯವನ್ನು ಅಲ್ಲಿಗೆ ಸ್ಥಗಿತಗೊಳಿಸಿ ಶಾಲೆಗೆ ಹೋಗಲು ಸ್ಕೂಟರ್ ಚಾಲು ಮಾಡಿದೆ. 

Tuesday, January 14, 2020

ಪುಸ್ತಕ ವಿಮರ್ಶೆ -ಅಘೋರಿಗಳ ಲೋಕದಲ್ಲಿ

ಪುಸ್ತಕ: ಅಘೋರಿಗಳ ಲೋಕದಲ್ಲಿ 
ಲೇಖಕ: ಸಂತೋಷಕುಮಾರ್ ಮೆಹೆಂದಳೆ   


ಲೇಖಕರಿಗೆ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಯನ್ನೇ ಇಲ್ಲಿ ಲಗತ್ತಿಸಿದ್ದೇನೆ. 


ಮೆಹೆಂದಳೆ ಅವರೇ,
ಮುಂದೆ ಬುಡುಬುಡಿಕೆಯವನು ಬಂದರೇ ನಮ್ಮಂತ ಕಿರಿಯರನ್ನು ಹೊರಗೆ ಬಿಡದ ಹಿರಿಯರು/ಮಿತ್ರರು , ಈ ಪುಸ್ತಕವನ್ನು ಓದುವಾಗ ಬಯ್ದಿದ್ದೇ ಬಯ್ದಿದ್ದು! 'ನಿನಗೆಲ್ಲಿಂದ ಸಿಕ್ತು? ಬ್ಯಾರೆ ಯಾವ್ದ್ ಓದಾಕ ಸಿಗಲಿಲ್ಲೇನು? ಯಾವ ಪುಣ್ಯಾತ್ಮ ಬರೆದನೋ?' ಹೀಗೆ.. ಆದರೆ ನಿಜವಾದ ಅಘೋರಿ ಎಂದರೇನು? ಸಾತ್ವಿಕ ಅಘೋರಿಯ ಉದ್ದೇಶ ತಿಳಿಸಿ ಹೇಳಿದ ಮೇಲೆ, ಇಷ್ಟೊಂದು ಅಘೋರಿಯ ಬಗ್ಗೆ ಮಾಹಿತಿ ಹೇಗೆ ಸಿಕ್ತು ಅಂತ ಕೇಳಿ ಪುಸ್ತಕ ಓದಿದರು ಹಾಗು ಓದುತ್ತಿದ್ದಾರೆ! ಪುಸ್ತಕದ ಮೊದಲನೇ ಅಧ್ಯಾಯದಿಂದ ಕೊನೆಯ ಅನುಬಂಧಗಳ ವರೆಗೂ ಬೇಸರವಿಲ್ಲದೆ ಓದಿಸಿಕೊಂಡು ಹೋಯಿತು. ಕೆಲವೊಂದು ಆಧ್ಯತ್ಮ ವಿಷಯಗಳು ತಲೆಯ ಮೇಲಿಂದ ಹಾಯ್ದು ಹೋದರೂ ಪ್ರಾಯೋಗಿಕ ಉದಾಹರಣೆಗಳನ್ನು ನೀಡುತ್ತಾ ಸಾಗುವುದರಿಂದ ಅಷ್ಟೇ ಆಪ್ತವಾದವು. ಅದರಲ್ಲೂ ವಿಜಯ್ ಬಾಬಾ ಹೇಳುವ ಮಾತುಗಳು ಅಮೋಘ!  ಅಘೋರಿ ಎಂದರೆ ನೆನಪಾಗುವುದೇ ಕುಂಭಮೇಳ. ಅದು ಬಿಟ್ಟರೆ ನನಗೆ ಅದರಲ್ಲಿ ಯಾವ ವಿಶೇಷ ಆಸಕ್ತಿಗಳು ಇದ್ದಿರಲಿಲ್ಲ ಕಾರಣ ಇದು ಬರೀ ಡೋಂಗಿತನ ಎಂದೇ ನಿರ್ಲಕ್ಷಿಸಿದ್ದೆ. ಆದರೆ ಈ ಪುಸ್ತಕ ಬೇರೊಂದು ಲೋಕವನ್ನೇ ತೆರೆದಿಟ್ಟಿತು. ಕಂಡು ಕೇಳರಿಯದ ಭೂತಗಳ ಹೆಸರಷ್ಟೇ ಅಲ್ಲದೇ ಚಿತ್ರವಿಚಿತ್ರವಾದ ಕುಂಡಲಿನಿ, ಅರತ್ಯುಂಗ ಜೊತೆಜೊತೆಗೆ ನಾಡಿ ಚಕ್ರಗಳು ಎಲ್ಲದರ ಪರಿಚಯ! 

ನನ್ನ ಪ್ರಕಾರ ಇದು ಬರಿ ಪುಸ್ತಕವಾಗಿರದೆ ಒಂದು ಡಾಕ್ಯುಮೆಂಟ್ ತರಹ ಇದೆ. ಇದರಲ್ಲಿ ಸ್ವಂತ ಅನುಭವ, ಹಿಂದಿನ ಕಥಾನಕ, ವೈಜ್ಞಾನಿಕ ತರ್ಕ, ಕೆಲ ಸ್ವಂತವಾಗಿ ಒಡ್ಡಿಕೊಂಡ ಪ್ರಯೋಗಗಳು, ಅದಕ್ಕೆ ತಕ್ಕಂತೆ ಇರುವ ಫೋಟೋಗಳು (ಫೋಟೋ ಕೆಳಗಡೆ ಸಂಕ್ಷಿಪ್ತ ವಿವರಣೆ ನೀಡಿದ್ದರೆ ಓದುಗರಿಗೆ ಇನ್ನೂ ಲಾಭವಾಗುತ್ತಿತ್ತು ), ವಿಷಯಕ್ಕೆ ಸಂಬಂದಿಸಿದ ವಿಷಯಗಳ ವಿಶ್ಲೇಷಣೆ ಇತ್ಯಾದಿ! ಇಷ್ಟೆಲ್ಲಾ ಮಾಹಿತಿ ಒದಗಿಸಿಯೂ 'ಅವರವರ ನಂಬಿಕೆ ಅವರಿಗೆ ಬಿಟ್ಟಿದ್ದು ' ಎನ್ನುವ ಲೇಖಕರ ಪರಿ ವಿಶಿಷ್ಟ/ವಿಚಿತ್ರ! ಇಂತ ಸತ್ಯವನ್ನು ಪರಾಂಬರಿಸಿ ಬರೆಯುವ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಬರಲಿ.

-Anupama K Benachinamaradi
Sept 1, 2019

ಪುಸ್ತಕ ವಿಮರ್ಶೆ - ಎಂಟೆಬೆ

ಪುಸ್ತಕ: ಎಂಟೆಬೆ 
ಲೇಖಕ: ಸಂತೋಷಕುಮಾರ್ ಮೆಹೆಂದಳೆ 



ಎಂಟೆಬೆ ಪುಸ್ತಕವು ಸತ್ಯ ಘಟನೆ ಆಧಾರಿತ ಕಾದಂಬರಿಯಾಗಿದ್ದು, ಇಸ್ರೇಲ್ ದೇಶದ 
ವಿಮಾನವನ್ನಪಹರಿಸಿದಾಗ ಇಸ್ರೇಲ್ ಮಿಲಿಟರಿ ತಂಡ ನಡೆಸಿದ ಯಶಸ್ವೀ ಕಾರ್ಯಾಚರಣೆಯ ಬಗ್ಗೆ ಇದೆ. 
ಪುಸ್ತಕ ಓದಿದ ನಂತರ ತುಂಬಾ ಸಂತೋಷವಾಯಿತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಂದು ಪ್ರಾಜೆಕ್ಟ್ ನಲ್ಲಿ ಕೆಲ ಇಸ್ರೇಲಿಗಳು ಇದ್ದರು. ಇವರ ಉಪಸ್ಥಿತಿ ಕೇವಲ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತ್ರ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿ ಕೊಯ್ಯ ಕೊಯ್ಯ ಎಂದು ಕಾಲ್ ನಲ್ಲಿ ಕೆಮ್ಮಿದರೆ, ಅಮೆರಿಕನ್ನರು,  ಫಾರ್ಮಾಲಿಟಿಗೋಸ್ಕರವಾದ್ರೂ ಕೇಳಿದ್ದಿದೆ. ಆದರೆ ಈ ಇಸ್ರೇಲಿಗರ ಧ್ವನಿ ಮಾತ್ರ ಯಾವಾಗಲೂ ಒಂದೇ,  ನ್ಯೂಸ್ ರೀಡರ್ ತರಹ! ಕೆಲಸದ ಒಂದು ಪರಿದಿಯೆಳೆದರೆ ಮುಗೀತು. ಅಷ್ಟೇ, ಎಂಥ ಎಮರ್ಜೆನ್ಸಿ ಇದ್ರೂ ಹೆಚ್ಚಿನ ಕೆಲಸ ಮಾಡಾಂಗಿಲ್ಲ. ಆದ್ರೆ ಕೊಟ್ಟ ಕೆಲಸ ಕರೆಕ್ಟ್ ಟೈಮಿಗೆ ರೆಡಿ. ಪುಸ್ತಕ ಓದಿದ ಮೇಲೆ ಇವರು ಮಾಡಿದ್ದು ಸರೀನೇ ಎಂದೆನಿಸಿತು. 

ಪುಸ್ತಕದಲ್ಲಿ ಬರುವ ಭೌಗೋಳಿಕ ವಿವರಣೆ, ರಾಜಕೀಯ ಹಾಗೂ ರಣರಂಗದ ಯಥಾವತ್ ಚಿತ್ರಣ ತುಂಬಾ ರೋಚಕವಾಗಿ ಲೇಖಕರು ಬರೆದಿದ್ದಾರೆ. ಸತ್ಯಘಟನೆ ಆಧಾರಿತ ಕಾದಂಬರಿ ಆದ್ದರಿಂದ ಲೇಖಕರ ಗ್ರೌಂಡ್ ವರ್ಕ್ ತುಂಬಾ ಪ್ರಶಂಸನೀಯ. ಆದರೆ , ಇಂಥ ಸತ್ಯ ಘಟನೆ ಆಧಾರಿತ ಕಾದಂಬರಿ ಬರೆಯುವಾಗ, ಕಾದಂಬರಿಯನ್ನು  ಅಧ್ಯಾಯಗಳಾಗಿ ವಿಂಗಡಿಸಿ ಅದನ್ನು ಪರಿವಿಡಿ ಅಂತೆ ಸೇರಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. .

ಇನ್ನು, ಕಾದಂಬರಿಯಲ್ಲಿ ಬರುವ  'ಬ್ರಿಗೆಟ್ಟಿ ಎಂಬ ಮಹಿಳಾ ಉಗ್ರವಾದಿಯನ್ನು ಗುಂಡಿಡುವಾಗ' ಲೇಖಕರು ಮಹಿಳಾ ಡ್ರೈವಿಂಗ್, body reflex of women ಬಗ್ಗೆ ಬರೆದಿದ್ದು. ಬ್ರಿಗೆಟ್ಟಿ ಒಬ್ಬ ಟ್ರೈನ್ಡ್ ಕ್ರಿಮಿನಲ್ ಅಥವಾ ಟೆರ್ರರಿಸ್ಟ್ ಇರುವುದರಿಂದ ಆಕೆಯ ಮನೋಸ್ಥಿತಿ ಬೇರೆಯೇ ಆಗಿರುತ್ತದೆ. ಹೀಗಾಗಿ mentality, body reflex ಎಲ್ಲವೂ ಒಬ್ಬ ಟೆರ್ರರಿಸ್ಟ್ ತರಹವೇ ಆಗಿರುತ್ತದೆ, ಇದನ್ನು ಒಬ್ಬ ಸಾಮಾನ್ಯ ಮನುಷ್ಯ ಜೀವಿಗೆ ಹೋಲಿಸಲು ಅಸಾಧ್ಯ (ನನ್ನ ಪರಿಚಯದ ಡಾಕ್ಟರ್ ಒಬ್ಬರು ಫಾರೆನ್ಸಿಕ್ ಮೆಡಿಸಿನ್ ವಿಷಯದಲ್ಲಿ ಓದಿ ಹೇಳಿದ್ದರ ಸಾರಾಂಶ ) . ಹೀಗಾಗಿ ಇದನ್ನು ಕಾದಂಬರಿ ಎಂದೇ ಅನುಭವಿಸಬೇಕೇ ಹೊರತು ಲೇಖಕರು ಎಲ್ಲಾ ಕಾಲಕ್ಕೂ ಅಪ್ರಿಯ ಸತ್ಯವನ್ನೇ ಬರೆಯುತ್ತಿದ್ದಾರೆ ಎಂದು ಭಾವಿಸಬೇಕಾಗಿಲ್ಲ ಎಂದುಕೊಂಡಿದ್ದೇನೆ. 

ಒಟ್ಟಾರೆಯಾಗಿ, ಎಂಟೆಬೆ ಕಾರ್ಯಾಚರಣೆ ಬಗ್ಗೆ ಗೊತ್ತಿದ್ದರೂ ಕೂಡ, ಇದನ್ನು ಓದಿ ಅನುಭವಿಸುವುದರ ಮಜವೇ ಬೇರೆ. ಅದರಲ್ಲೂ ಮಾತೃಭಾಷೆಯಲ್ಲಿ ಓದುವುದೆಂದರೆ ಸ್ವರ್ಗಸುಖ. ಇದನ್ನು ಬರೆದ ಲೇಖಕರಿಗೆ  ನನ್ನ ಕೃತಜ್ಞತೆಗಳು. 

-Anupama K Benachinamaradi
20th December 2019

Monday, January 13, 2020

ನಮ್ಮ ಫ್ಯಾಷನ್ ಸೆನ್ಸ ಪರಿಸರಕ್ಕೆ ಪೂರಕವಾಗಿದೆಯೇ?! - October issue of 'Priyanka' monthly magazine 2019.








 ನಮ್ಮ ಫ್ಯಾಷನ್ ಸೆನ್ಸ ಪರಿಸರಕ್ಕೆ ಪೂರಕವಾಗಿದೆಯೇ?!
   ಮಳೆಗಾಲ ಶುರುವಾಗುತ್ತಿದ್ದಂತೆಯೇ ರೈನ್ ಕೋಟ್, ಕೊಡೆಗಳ ಜಾಹಿರಾತುಗಳು ರಾರಾಜಿಸುವುದು ಸಹಜ. ಆದರೆ, ಇವುಗಳ ಜೊತೆಗೆ ಮಾನ್ಸೂನ್ ಫ್ಯಾಷನ್ ಸೇಲ್, ಕೂಲ್ ಅಂಡ್ ಟ್ರೆಂಡಿ ಫ್ಯಾಷನ್ ಅಂತಹ ಬಟ್ಟೆಗಳ ಬಗ್ಗೆ ಜಾಹಿರಾತುಗಳು ಇತ್ತೀಚಿಗೆ ಸಾಮಾನ್ಯವಾಗಿವೆ. ಗ್ರಾಹಕರನ್ನು ಸೆಳೆಯಲು ಹತ್ತು ಹಲವು ಕ್ಯಾಚಿ ಶಬ್ದಗಳನ್ನುಪಯೋಗಿಸಿ ಎಂಥವರನ್ನೂ ಒಂದು ಸಲ ಬಟ್ಟೆ ಖರೀದಿಸಬೇಕೆಂದು ಪ್ರಚೋದಿಸುವಂತಹ ಜಾಹಿರಾತುಗಳು!
ಆದರೆ ನಿಜವಾಗಿಯೂ ನಮಗೆ ಋತುಗಳಿಗೆ ತಕ್ಕಂತೆ ಬಟ್ಟೆ ಖರೀದಿಸುವಿಕೆಯ ಅನಿವಾರ್ಯತೆ ಇದೆಯೇ? ಒಂದು ವೇಳೆ ಇದ್ದರೂ ಕೂಡ ಅದು ಪ್ರತಿ ವರ್ಷವೂ ಖರೀದಿಸಬೇಕಾಗಿರುವಂತಹ ಅವಶ್ಯಕತೆ ಇದೆಯೇ? ಹೀಗೆ ಯೋಚಿಸುತ್ತ ಹೋದಂತೆ ಕೊನೆಗೆ ಯೋಚನಾಲಹರಿ ನಿಲ್ಲುವುದು, ಪರಿಸರ ಹಾನಿ ಎಂಬ ಘೋರ ಸತ್ಯಕ್ಕೆ. ಹೌದು, ನಮ್ಮ ಫ್ಯಾಷನ್ ನೇರವಾಗಿ ಪರಿಸರಕ್ಕೆ ಸಂಬಂಧ ಪಟ್ಟಿದೆ. ಹಾಗಂತ, ಹುಲಿ ಚರ್ಮದ ಬಟ್ಟೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ತಿಳಿದರೆ ಅದು ತಪ್ಪು ಕಲ್ಪನೆ. ನಮ್ಮ ಫ್ಯಾಷನ್  ಸೆನ್ಸ್ ನೇರವಾಗಿ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ಎಷ್ಟೇ ಆತ್ಮವಿಶ್ವಾಸದಿಂದ ಬೀಗುತ್ತಿದ್ದರೂ, ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ. ಕೆಲವು ಸೂಕ್ಷ್ಮ ಸಂಗತಿಗಳು ಹೇಗೆಲ್ಲಾ ಪರಿಸರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ನೋಡೋಣ. 
ಮೊದಲನೆಯದಾಗಿ, ತುಂಬ ಅಗ್ಗವಾಗಿ ಸಿಗುವ ಕಾಶ್ಮೀರಿ ಉಲನ್ ನಿಂದ ತಯಾರಾದ ಸ್ವೇಟರ್, ಸ್ಕ್ಯಾರ್ಪುಗಳು. ಇದು ಕುರಿ ಉಣ್ಣೆಯಿಂದ ತಯಾರಿಸಲ್ಪಡುವುದರಿಂದ ತುಂಬಾ ಮೆತ್ತಗಿನ ಮತ್ತು ಬೆಚ್ಚನೆಯ ಅನುಭವ ನೀಡುತ್ತದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಅಧಿಕ ಬೇಡಿಕೆಯಿದೆ. ಈ ಹೆಚ್ಚಾದ ಬೇಡಿಕೆಯಿಂದ ಕುರಿ ಸಾಕಣೆ ದ್ವಿಗುಣಗೊಂಡಿದೆ. ಪರಿಣಾಮ, ಅತಿಯಾದ ಮೇಯುವಿಕೆಯಿಂದ ಮಣ್ಣು ಸವಕಳಿ, ವನ್ಯಜೀವಿಗಳ ಭೂ ಕಬಳಿಕೆ! ಇದರಿಂದಾಗಿ ಹಿಮ ಚಿರತೆಗಳ ಸಂಖ್ಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 
ಎರಡನೆಯದಾಗಿ, ವಾಷಿಂಗ್ ಮಷೀನ್ ಬಳಕೆಯಿಂದ. ಪ್ಲಾಸ್ಟಿಕ್ ತ್ಯಾಜ್ಯವು ನೀರಿನಲ್ಲಿ ಸೇರಿಕೊಂಡು ಸಮುದ್ರದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯದ ಚಿಕ್ಕ ಚಿಕ್ಕ ದ್ವೀಪಗಳೇ ಸೃಷ್ಟಿಯಾಗಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ನೀರಿನಲ್ಲಿ ಬೆರಕೆಯಾಗುವ ಮೈಕ್ರೋ ಫೈಬರ್ ಗಳ ಬಗ್ಗೆ ಗೊತ್ತಿದೆಯೇ? ನಾವು ಬಳಸುವ ಪಾಲಿಸ್ಟರ್ ಮತ್ತು ನೈಲಾನ್ ಬಟ್ಟೆಗಳನ್ನು ವಾಷಿಂಗ್ ಮಷೀನ್ ನಲ್ಲಿ ತೊಳೆದಾಗ, ಅಸಂಖ್ಯಾತ ಸೂಕ್ಷ್ಮ ಮೈಕ್ರೋ ಫೈಬರ್ ಗಳು ಬಿಡುಗಡೆಯಾಗುತ್ತವೆ. ಈ ಮೈಕ್ರೋ ಫೈಬರ್ ಗಳು ಕಡಲ ಜೀವಿಗಳಾದ ಏಡಿ, ಲಾಬ್ಸ್ಟರ್, ಮೀನು, ಕಡಲ ಆಮೆ, ಪೆಂಗ್ವಿನ್ ಗಳ ದೇಹಕ್ಕೆ ಸೇರಿಕೊಳ್ಳುತ್ತವೆ. ಇದು ಈ ಜೀವಿಗಳ ಜೀರ್ಣನಾಳವನ್ನು ನಾಶ ಪಡಿಸುತ್ತವೆ. 
ಮೂರನೆಯದಾಗಿ, ನಾವು ಬಳಸುವ ವಿಸ್ಕೋಸ್ಸ್ ಹಾಗೂ ರೇಯಾನ್ ಉಡುಪುಗಳಿಂದಾಗಿ. ಕರಗುವ ಪಲ್ಪ್ ಅಥವಾ ಬ್ಲೀಚ್ ಮಾಡಲಾದಂತಹ ಕಟ್ಟಿಗೆಯ ಪಲ್ಪ್ ಎಂಬುದು ವಿಸ್ಕೋಸ್ಸ್ ಮತ್ತು ರೇಯಾನ್ ಬಟ್ಟೆ ತಯಾರಿಸಲು ಉಪಯೋಗಿಸುವ ಬಹು ಮುಖ್ಯವಾದ ಕಚ್ಚಾವಸ್ತು. ಈ ಕಚ್ಚಾವಸ್ತುವು ಮರಗಿಡಗಳಿಂದ ತಯಾರಾಗುವುದರಿಂದ, ಇದು ನೇರವಾಗಿ ಅರಣ್ಯ ನಾಶಕ್ಕೆ ಸಂಬಂಧಿಸಿದೆ. 
ಹಾಗಂತ ಇನ್ನು ಉಳಿದಿರುವ ಕಾಟನ್ ಬಟ್ಟೆಯಷ್ಟೇ ಇದಕ್ಕೆ ಪರಿಹಾರ ಎಂದಲ್ಲಿ, ಅದೂ ಕೂಡ ತಪ್ಪಾಗುತ್ತದೆ. ಏಕೆಂದರೆ ಕಾಟನ್ ಬಟ್ಟೆ ತಯಾರಿಸಲು ಬೇಕಾಗುವ ಹತ್ತಿ ಬೆಳೆಯಲು ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ.
ಮೇಲ್ಕಂಡ ಕಾರಣಗಳಲ್ಲದೇ, ಬಹುಮುಖ್ಯವಾದ ಕಾರಣವೇನೆಂದರೆ 'ಫಾಸ್ಟ್ ಫ್ಯಾಷನ್ ' ಎನ್ನುವ ತಂತ್ರ. ಅಗ್ಗದ ಮತ್ತು ಬಳಸಿ ಬಿಸಾಡುವ ತಂತ್ರ. ಇತ್ತೀಚಿಗೆ ಜವಳಿ ಮಳಿಗೆಗಳು ತಮ್ಮಲ್ಲಿರುವ ಫ್ಯಾಷನ್ ಕಲೆಕ್ಷನ್ ವನ್ನು ದ್ವಿಗುಣಗೊಳಿಸಿವೆ. ಇದರಿಂದಾಗಿ ಬಟ್ಟೆಗಳ ರಾಶಿಯೇ ಕಸವಾಗಿ ಪರಿಣಮಿಸಿದೆ. ಹಾಗೂ ಹೊಸ ಕಲೆಕ್ಷನ್ ತಯಾರಿಕೆಗೋಸ್ಕರ ನಿತ್ಯ ನೂರಾರು ಗಿಡಮರಗಳನ್ನು ಕಡಿಯಲಾಗುತ್ತಿದೆ.
ಹಾಗಾದರೆ, ಈ ಹಾನಿಯನ್ನು ತಪ್ಪಿಸಲು ನಾವು ಕೈಗೊಳ್ಳಬೇಕಾದ ಕ್ರಮಗಳನ್ನು ನೋಡೋಣ. 
  • ಹೊಸದಾಗಿ ಬಟ್ಟೆ ಖರೀದಿಸುವ ಬದಲು, ಬಂಧು ಮಿತ್ರರಲ್ಲಿ ಬಟ್ಟೆಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳಿ. 
  • ಹರಿದು ಹೋದ ಬಟ್ಟೆಗಳನ್ನು ಎಸೆಯುವುದರ ಬದಲು, ದುರಸ್ತಿಗೊಳಿಸಿ ಮತ್ತಷ್ಟು ದಿನ ಉಪಯೋಗಿಸಿ. 
  • ಉತ್ತಮ ಗುಣಮಟ್ಟದ ಬಟ್ಟೆಗಳನ್ನೇ ಕೊಂಡುಕೊಳ್ಳಿ.  
  • ಸಸ್ಟೇನೇಬಲ್ ಬ್ರ್ಯಾಂಡ್ (ಪರಿಸರಕ್ಕೆ ಹಾನಿ ಮಾಡಲಾರದೆ ತಯಾರಿಸಲಾದ ಬಟ್ಟೆ )ಗಳಿಗೆ ಆದ್ಯತೆ ನೀಡಿ. 
ನಮ್ಮ ಹಿರಿಯರು ಒಂದು ಬಟ್ಟೆಯನ್ನು ಮೊದಲು ಉಡುಗೆಯಾಗಿ, ನಂತರ ಕೈ ಒರೆಸುವ ಬಟ್ಟೆಯಾಗಿ, ಆಮೇಲೆ ಅಡುಗೆ ಮನೆಯನ್ನು ಸ್ವಚ್ಛವಿಡಲು ಒರೆಸುವ ಬಟ್ಟೆಯಾಗಿ ಉಪಯೋಗಿಸುತ್ತಿದ್ದರು. ಯಾವುದನ್ನೂ ಬಳಸಿ ಬಿಸಾಡುವ ಸಂಸ್ಕೃತಿ ಇದ್ದಿರಲಿಲ್ಲ. ಇದನ್ನೇ ಈಗ 'ಗ್ರೀನ್ ಫ್ಯಾಷನ್ ' ಅಥವಾ 'ಸಸ್ಟೇನೇಬಲ್ ಫ್ಯಾಷನ್ ' ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಿದ್ದಾರೆ. ನಮ್ಮ ಪೂರ್ವಿಕರು ಸಹಜವಾಗಿ ರೂಢಿಸಿಕೊಂಡು ಬಂದ ಆಚರಣೆಗಳು ಪ್ರಕೃತಿಗೆ ಪೂರಕವಾಗಿಯೇ ಇರುತ್ತಿದ್ದವು. ಇದನ್ನು ಮುಂದುವರೆಸುವುದು ಮಾತ್ರ ನಮ್ಮ ಜಾಣತನದ ಮೇಲೆ ಅವಲಂಬಿತವಾಗಿದೆ. 


ಧನ್ಯವಾದಗಳು,
ಅನುಪಮಾ ಕೆ ಬೆಣಚಿನಮರ್ಡಿ

Sunday, January 12, 2020

ಸಂಕ್ರಾಂತಿ ಸಂಭ್ರಮ-ಮಕ್ಕಳಿಗೆ ಎಳ್ಳೆರೆಯುವುದು-Udayavani, January 8, 2020


ಮಕ್ಕಳಿಗೆ ಎಳ್ಳೆರೆಯುವುದು:

ಪ್ರತಿಯೊಂದು ರಾಶಿಯ ಸಂಕ್ರಮಣ ಇದ್ದರೂ ಕೂಡ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸಂಕ್ರಮಣಗೈಯುವ ಘಳಿಗೆ ಅತ್ಯಂತ ಮಹತ್ತರವಾದುದು. ಅಂದಿನಿಂದಲೇ ಉತ್ತರಾಯಣ ಆರಂಭ. ಸೌರಮಾನವೂ ಕೂಡ. ಅಂದರೆ ದೇವತೆಗಳ ಪರ್ವ. ಈ ಮಕರ ಸಂಕ್ರಾಂತಿಯು ದೇಶದ ಹಲವು ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟಿದ್ದಲ್ಲದೆ ಆಚರಣೆಯಲ್ಲೂ ಭಿನ್ನತೆಗಳನ್ನು ಕಾಣಬಹುದು. ಆದರೆ, ವಿಶೇಷವಾಗಿ ಐದು ವರ್ಷದ ಒಳಗಿನ ಮಕ್ಕಳಿಗೆ, ಸಂಕ್ರಾಂತಿಯಂದು ಎಳ್ಳು ಎರೆಯುವ ಆಚರಣೆ ಇದೆ. ಇದನ್ನು ಕೆಲವೆಡೆ ಎಳ್ಳು ಎರೆಯುವುದು ಅಂದರೆ ಇನ್ನು ಕೆಲವೆಡೆ ಕರಿ ಎರೆಯುವುದು ಅಥವಾ ಹಣ್ಣೆರೆಯುವುದು ಎಂದೂ ಕರೆಯುತ್ತಾರೆ. 

ಎಳ್ಳು ಎರೆಯುವ ಉದ್ದೇಶ:
ಪುಣ್ಯತೀರ್ಥಗಳಲ್ಲಿ ಅಂದರೆ ನದಿ ಸಂಗಮ, ಸಮುದ್ರ ಮುಂತಾದ ಕಡೆಗಳಲ್ಲಿ ಪವಿತ್ರ ಸ್ನಾನ ಮಾಡುವ ಪದ್ದತಿಯಿದೆ. ಶರೀರದ ಕೊಳೆಯನ್ನು ನಿವಾರಿಸುವ ಜೊತೆಗೆ ಮಾನಸಿಕ ಕೊಳೆಯನ್ನು ನಾಶ ಮಾಡುವುದು ಸ್ನಾನದ ಉದ್ದೇಶ. ಸ್ನಾನದಷ್ಟೇ ಪ್ರಾಮುಖ್ಯತೆ ಎಳ್ಳಿಗೂ ಇದೆ. ಎಳ್ಳಿನ ನೀರಿನಿಂದ ಸ್ನಾನ ಮಾಡುತ್ತಾರೆ. ಪೀಡಾ ಪರಿಹಾರಕ್ಕಾಗಿ ಎಳ್ಳು, ಬೆಲ್ಲ, ಕೊಬ್ಬರಿ ಹಂಚುತ್ತಾರೆ. ಅಂತೆಯೇ ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆ ಎಂಬ ನಂಬಿಕೆಯಿದೆ. 

ಎಳ್ಳು ಎರೆಯುವ ಆಚರಣೆ ಹೇಗೆ?
ಸಂಕ್ರಾಂತಿ ದಿನ ಮಗುವಿಗೆ ವಿಶೇಷವಾಗಿ ಕಪ್ಪು ಬಣ್ಣದ ಹೊಸ ಬಟ್ಟೆಯನ್ನು ತೊಡಿಸಿರುತ್ತಾರೆ. ಜೊತೆಗೆ ತಾಯಿಯೂ ಕೂಡ ಕಪ್ಪು ಬಣ್ಣದ ಸೀರೆ ಉಡುವ ವಾಡಿಕೆ. ಪ್ರತಿ ಮಂಗಳಕಾರ್ಯದಲ್ಲಿಯೂ ಕಪ್ಪು ಬಣ್ಣಕ್ಕೆ ನಿಷೇಧವಿದ್ದರೂ ಈ ಆಚರಣೆಯಲ್ಲಿ ಕಪ್ಪು ಬಣ್ಣಕ್ಕೆ ವಿಶೇಷ ಪ್ರಾಶಸ್ತ್ಯ. ಬಹುಷಃ ವೈಜ್ಞಾನಿಕವಾಗಿ ಕಪ್ಪು ಬಣ್ಣ ಶಾಖ ಹೀರುವುದರಿಂದ ಇದಕ್ಕೆ ಹಿರಿಯರು ಪ್ರಾಮುಖ್ಯತೆಯನ್ನು ನೀಡಿರಬಹುದು. ಇನ್ನೊಂದು ವಿಶೇಷತೆ ಎಂದರೆ ಕುಸುರೆಳ್ಳಿನ ಆಭರಣ! ಈ ಆಚರಣೆಗೆಂದೇ ಮಗುವಿಗೆ ಕುಸುರೆಳ್ಳಿನಿಂದ ತಯಾರು ಮಾಡಲಾದ ಆಭರಣಗಳನ್ನು ತೊಡಿಸುತ್ತಾರೆ. ಗಂಡು ಮಗುವಿದ್ದರೆ, ಕೃಷ್ಣನಂತೆ ಕಿರೀಟ, ಹಾರ, ಬಾಜುಬಂಧ, ಬಾಳೆಯ ತರಹ ಕಡಗ, ಕೊಳಲು ಎಲ್ಲವನ್ನೂ ಕುಸುರೆಳ್ಳಿನಿಂದ ತಯಾರಿಸುತ್ತಾರೆ.

 ಹೆಣ್ಣು ಮಗುವಿದ್ದರೆ, ಕುಸುರೆಳ್ಳಿನ ಬಳೆ, ಸರ, ಸೊಂಟಪಟ್ಟಿ, ಬೈತಲೆ ಪಟ್ಟಿ, ಕಿವಿಯೋಲೆಗಳಿಂದ ಅಲಂಕಾರ ಮಾಡುತ್ತಾರೆ. ಮೊದಲೆಲ್ಲ, ಎಲ್ಲ ತಾಯಂದಿರೂ ಇವುಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದರೆಂದು ಅಮ್ಮ ಹೇಳುವಳು. ಆದರೆ, ಇತ್ತೀಚಿಗೆ ಇವು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಒಂದು ತಿಂಗಳು ಮುಂಚಿತವಾಗಿ ಹೇಳಿ ಮಾಡಿಸಿದರಾಯಿತು. ಕೆಲ ಕಲಾವಿದರು ಈ ಆಭರಣಗಳನ್ನು ಅಕ್ಕಪಕ್ಕದ ರಾಜ್ಯಗಳಲ್ಲಿ ನೆಲೆಸಿರುವವರಿಗೂ ಹಾಗು ಹೊರದೇಶಗಳಿಗೂ ಕೂಡ ಕಳುಹಿಸಿದ ಉದಾಹರಣೆಗಳು ಉಂಟು. . 

ಈ ಆಚರಣೆಯಲ್ಲಿ ಎಳ್ಳಿಗೆ ಪ್ರಮುಖ ಪ್ರಾಶಸ್ತ್ಯ ಇದ್ದರೂ ಕೂಡ; ಎಳ್ಳಿನ ಜೊತೆಗೆ ಕಡ್ಲೆಪುರಿ, ಕಾಶಿ ಬೋರ್ ಕಾಯಿ, ಹಸಿ ಬಟಾಣಿ ಕಾಯಿ, ಕಡಲೆ ಸುಲಿಗಾಯಿ, ಸಿಹಿಯಾದ ಬೆಂಡು-ಬತ್ತಾಸುಗಳನ್ನು ಸೇರಿಸಿ ಮಿಶ್ರಣ ಮಾಡಿ; ಇದನ್ನು ಮಗುವಿನ ತಲೆಯ ಮೇಲೆ ಬೆಳ್ಳಿ ಬಟ್ಟಲಿನಿಂದ ಐದು ಬಾರಿ ಎರೆಯುತ್ತಾರೆ. ಮುತ್ತು ಹವಳದ ಸಂಕೇತವಾಗಿ ಒಂದು ಮುತ್ತನ್ನೊ ಅಥವಾ ಹವಳದ ಉಂಗುರವನ್ನು ಮಿಶ್ರಣದಲ್ಲಿ ಹಾಕಿ ಎರೆಯುತ್ತಾರೆ. ಹೀಗೆ ಎರೆದ ನಂತರ ಬೀಳುವ ಸಿಹಿ ಹಾಗು ಇನ್ನಿತರ ಕಾಯಿಗಳನ್ನು ಆಚರಣೆಗೆ ಬಂಡ ಉಳಿದ ಮಕ್ಕಳು ಹೆಕ್ಕುವುದು ಪದ್ಧತಿ. ಇತ್ತೀಚಿಗೆ ಮಕ್ಕಳು ಚಾಕಲೇಟನ್ನು ಇಷ್ಟ ಪಡುವುದರಿಂದ ಹಾಗು ಬೆಂಡು ಬತ್ತಾಸುಗಳ ಅಭಾವದಿಂದ ಬೆಂಡು ಬತ್ತಾಸಿನ ಜಾಗವನ್ನು ಚಾಕಲೇಟುಗಳು ಆಕ್ರಮಿಸಿಕೊಂಡಿವೆ.
 


 ಬಂದ ಮಕ್ಕಳಿಗೆ ಸಿಹಿ ತಿನಿಸು ಹಾಗು ತಾಯಂದಿರಿಗೆ ಬಾಗಿನ ನೀಡುವುದು ವಾಡಿಕೆ. ಈ ಆಚರಣೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಕಂಡುಬರುತ್ತದೆ. ಆಚರಣೆಯಲ್ಲಿ ಕೊಂಚ ವ್ಯತ್ಯಾಸ ಹಾಗು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಿದ್ದರೂ ಮಕ್ಕಳ ಬಾಲಾರಿಷ್ಟ ನಿವಾರಣೆಗೆ ಎಳ್ಳು ಎರೆಯುವ ಸಂಪ್ರದಾಯ ಇನ್ನೂ ಉಳಿದಿದೆ. ಕೆಲವೆಡೆ ಸಂಕ್ರಾಂತಿಯಂದು ಎಳ್ಳು ಎರೆದರೆ ಕೆಲವೆಡೆ ರಥಸಪ್ತಮಿಯಂದು ಹಣ್ಣೆರೆಯುತ್ತಾರೆ


ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...