Sunday, April 11, 2021

ಬಣ್ಣ!!

 


ಕಣ್ಣಿಗೆ ಕಾಣುವ ಬಣ್ಣ ಚಂದವೂ ಇರಬಹುದು, ರೌದ್ರವೂ ಇರಬಹುದು! 
ಮನಸಿನ ಬಣ್ಣ ನೀರಿನ ಬಣ್ಣದಂತೆಯೂ ಇರಬಹುದು, ಗಾಳಿಯ ಬಣ್ಣದಂತೆಯೂ ಇರಬಹುದು!
ಒಬ್ಬರಿಗೆ ಕಾಣಿಸಿದ ಬಣ್ಣ ಇನ್ನೊಬ್ಬರಿಗೆ ಬೇರೆಯಾಗಿಯೂ ಕಾಣಿಸಬಹುದು!
ತನ್ನ ಬಣ್ಣ ಇತರರಿಗೆ ತೋರಿಸದೆಯೂ ಇರಬಹುದು!
ತಾನು ಕಾಣಬಯಸಿದ ಬಣ್ಣ, ಬಣ್ಣ ತಿರುಗಿಸಲೂಬಹುದು!
ತನ್ನಲ್ಲಿ ಹುದುಗಿರುವ ಬಣ್ಣ ತನಗೇ ಕಾಣಿಸದೆ ಇರಬಹುದು!!

Wednesday, April 7, 2021

ಪುಸ್ತಕ: ಕೆನ್ನಾಯಿಯ ಜಾಡಿನಲ್ಲಿ


 ಪುಸ್ತಕ: ಕೆನ್ನಾಯಿಯ  ಜಾಡಿನಲ್ಲಿ 

ಲೇಖಕರು: ಕೃಪಾಕರ್ ಮತ್ತು ಸೇನಾನಿ 
ಬೆಲೆ:೧೬೨
ಪ್ರಕಾಶನ: ಪುಸ್ತಕ ಪ್ರಕಾಶನ 



'ಕೆನ್ನಾಯಿ.. ' ಪುಸ್ತಕವು ಅದ್ಭುತವಾಗಿ ಬರೆಯಲ್ಪಟ್ಟಿದೆ. ಇದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳ ಸಂಗ್ರಹ.  ಮುಖ್ಯವಾಗಿ ಇದರಲ್ಲಿ ಕಾಡು ನಾಯಿಗಳ ಬಗ್ಗೆ ಬರೆದಿದ್ದರೂ,  ಕಾಡಿನಲ್ಲಿ ಅನುಭವಿಸಿದ ಇತರ ರೋಚಕ ಕಥೆಗಳೂ ಇವೆ.  ಹಿಂದೆಯೂ ಕೂಡ ಕೆನೆತ್ ಆಂಡರ್ಸನ್ ಅವರ  ಹೊಳಲ್ಕೆರೆಯ ನರಭಕ್ಷಕದಲ್ಲಿ ಕಾಡಿನ ಅನುಭವಗಳನ್ನು ಓದಿದ್ದರೂ ಅದು ಒಬ್ಬ ಬೇಟೆಗಾರನ ದೃಷ್ಟಿಕೋನದಲ್ಲಿತ್ತು. ಆದರೆ ಈ ಪುಸ್ತಕದಲ್ಲಿ ಇಬ್ಬರು ಸಂಶೋಧಕರ  ಅನುಭವ ಓದಿದ ಮೇಲೆ, ಮುನ್ನುಡಿಯಲ್ಲಿ ತೇಜಸ್ವಿ ಹೇಳಿದ್ದಂತೆ ಕಾಲ್ಪನಿಕದಂತೆಯೂ ಅನಿಸಿದೆ ಏಕೆಂದರೆ ಸಾಮಾನ್ಯ ಮನುಷ್ಯರಿಗೆ ಕಾಡು ಎನ್ನುವುದು ಕಾಲ್ಪನಿಕವೇ ಸರಿ! ಇದರಲ್ಲಿ ಆನೆ ಅಟ್ಟಿಸಿಕೊಂಡು ಬಂದ ಪ್ರಸಂಗ ಓದಿದಾಗ ನಗು ಉಕ್ಕಿದರೂ ಅದೆಷ್ಟು ಗಂಭೀರವಿತ್ತೆಂದೂ ಅನಿಸಿದ್ದಿದೆ. ಓದಿದಷ್ಟು ಮತ್ತೆ ಮತ್ತೆ ಕಾಡಿನಲ್ಲಿ ಕಳೆದು ಹೋಗುವ ಇನ್ನಷ್ಟು ಬರೆಯಬಾರದಿತ್ತೇ ಎಂದೆನಿಸಿತು. ಇದರಲ್ಲಿ ಉಲ್ಲೇಖಿಸಿರುವ ಪಕ್ಷಿಗಳು, ಕಾಡು ಕುರುಬರು , ಕಾಡು ನಾಯಿಗಳ ಹೊರತು ಇತರ  ವನ್ಯ ಜೀವಿಗಳ ನಡವಳಿಕೆಗಳು ಎಲ್ಲವೂ ಅತ್ಯಮೂಲ್ಯ ದಾಖಲೆಗಳಾಗಿವೆ. 
ಪುಸ್ತಕ ಓದಿದ ನಂತರ, ಲೇಖಕರ ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದಿರುವ  'wild dog diaries' documentary ಅನ್ನು ಯು ಟ್ಯೂಬ್ ಅಲ್ಲಿ ಸಾಧ್ಯವಾದರೆ  ನೋಡಿ.  ಹುಲಿ, ಸಿಂಹಗಳ ಅಧ್ಯಯನಕ್ಕಿಂತಲೂ ಕೆನ್ನಾಯಿಗಳ ಅಧ್ಯಯನ ಎಷ್ಟು ಕ್ಲಿಷ್ಟ ಎಂದು ಮನದಟ್ಟಾಗುತ್ತದೆ. ಇದನ್ನು ಓದುವ ವರೆಗೆ ನನಗೆ ಕೆನ್ನಾಯಿಗಳ ಬಗ್ಗೆ ಹೆಚ್ಚು ಆಸಕ್ತಿಯಿರಲೇ ಇಲ್ಲ. ಪುಸ್ತಕ ಕೆನ್ನಾಯಿಗಳ ಬಗ್ಗೆ ಪ್ರೀತಿ ಹುಟ್ಟಿಸಿತು!

Friday, April 2, 2021

ತಿಂಡಿ : ಬ್ರೆಡ್ ಮಿಸ್ಸಳ್

 





ತಿಂಡಿ : ಬ್ರೆಡ್ ಮಿಸ್ಸಳ್ 

ಊರು : ಗಡಿಂಗ್ಲಜ್ , ಮಹಾರಾಷ್ಟ್ರ   
ಸ್ಥಳ : ಸಮೃದ್ಧಿ ಮಿಸ್ಸಳ್ ಹೋಟೆಲ್ 
ವಿಳಾಸ: ಚರ್ಚ್ ರಸ್ತೆ, ಸೆಂಟ್ ಅಂಥೋನಿ ಚರ್ಚ್ ಎದುರಿಗೆ 
ಬೆಲೆ : ೪೫ 

ಅದೊಂದು ಸುಂದರ ಸಂಜೆ! ಆಗ ತಾನೇ ಕೊಕ್ಕರೆಗಳ ಹಿಂಡು ತಮ್ಮ ತಮ್ಮ ಗೂಡುಗಳಿಗೆ ಹಿಂದಿರುಗುತ್ತಿವೆ. ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಳಿದುಳಿದ ಅವತ್ತಿನ ಸರಕನ್ನು ಖಾಲಿ ಮಾಡಲು ಹವಣಿಸುತ್ತಿದ್ದಾರೆ. . ಅಲ್ಲೊಬ್ಬ ಅಜ್ಜಿ ಆಗ ತಾನೇ ಬಜ್ಜಿ ತಯಾರಿಸಲು ಹಿಟ್ಟು ಕಲಿಸಿಟ್ಟು ಎಣ್ಣೆ ಕಾಯುವುದನ್ನೇ ನೋಡುತ್ತಾ ನಿಂತಿದ್ದರೂ ಗ್ರಾಹಕರ ಆಗಮನವನ್ನೂ ನಿರೀಕ್ಷಿಸುತ್ತಿದ್ದಾಳೆ. ಕಿರಾಣಿ ಅಂಗಡಿಯವನಿಗೆ ಸಂಜೆ ಆಗಿದ್ದರ ಅರಿವೇ ಇಲ್ಲ. ಇತ್ತ ಟೈರ್ ಪಂಚರ್ ತೆಗೆಯುವ ಅಜ್ಜನಿಗೆ ಯಾವ ಧಾವಂತವೂ ಇಲ್ಲದೆ ಬೀಡಿ ಸೇದುತ್ತಾ, ನೀರಿನಲ್ಲಿ ಮುಳುಗಿಸಿದ ಟಯೆರ್ ನಿಂದ ಏಳುವ ಗುಳ್ಳೆಗಳನ್ನೇ ದಿಟ್ಟಿಸುತ್ತಿದ್ದಾನೆ. ಅಲ್ಲೊಂದು ಹದಿಹರೆಯದ ಹುಡುಗರ ಗುಂಪು ಚಹಾ ಕುಡಿಯುವ ನೆಪದಲ್ಲಿ ಬಳೆ ಅಂಗಡಿಗೆ ಬರುವ ಹುಡುಗಿಯರನ್ನು ಕದ್ದು ನೋಡುತ್ತಿದ್ದಾರೆ. ಇವೆಲ್ಲದಕ್ಕೆ ಸಾಕ್ಷಿಯಾಗುತ್ತ ನಮ್ಮ ಅವೆಂಜರ್ ಗಾಡಿಯು ಒಂದು ಮಿಸ್ಸಳ್ ಹೋಟೆಲಿನ ಮುಂದೆ ಬಂದು ನಿಂತಿತು. ಕೂಡಲೇ ಮೂಗಿಗೆ ಮಾಸ್ಕ ಧರಿಸಿ ಪೂರ್ತಿ ಖಾಲಿಯಿದ್ದ ಹೋಟೆಲಿಗೆ ನುಗ್ಗಿದೆ. ಈ ಊರಿನ ವಿಶೇಷ ತಿಂಡಿ ತಿನ್ನಲು ನನ್ನ ನಾಲಿಗೆ ಕಾಯುತ್ತಿತ್ತು. ಚೀಸ್ ಮಿಸ್ಸಳ್, ಬೆಣ್ಣೆ ಮಿಸ್ಸಳ್, ಪನೀರ್ ಮಿಸ್ಸಳ್, ತರಕಾರಿ ಮಿಸ್ಸಳ್ ಇತ್ಯಾದಿ ಇದ್ದರೂ ನಾನು ಸಾಮಾನ್ಯ ಮಿಸ್ಸಳ್ ತಿನ್ನಲು ಇಷ್ಟಪಟ್ಟೆ. ಕ್ಷಣಮಾತ್ರದಲ್ಲಿ ಒಂದು ದೊಡ್ಡ ತಟ್ಟೆಯಲ್ಲಿ ಮಿಸ್ಸಳ್ ಇರುವ ತುಸು ದೊಡ್ಡದೇ ಬಟ್ಟಲು, ಒಂದು ಚಿಕ್ಕ ಬಟ್ಟಲಿನಲ್ಲಿ ಮೊಸರು, ಬೀಟ್ ರೂಟ್ ತುಂಡುಗಳು, ಹೆಚ್ಚಿದ ಈರುಳ್ಳಿ, ನಿಂಬೆಹಣ್ಣಿನ ಹೋಳು, ಒಂದು ಚಿಕ್ಕ ಗಾಜಿನ ಗ್ಲಾಸಿನಲ್ಲಿ ಕೊಂಕಣಿ ರೀತಿಯ ಸೋಲ್ ಖಡಿ (ಮಜ್ಜಿಗೆ ಸೋಲ್ ಖಡಿ ) ಬಂತು. ಬಹುಷಃ ಇಲ್ಲಿಯ ಆಹಾರ  ಹೆಚ್ಚು ಖಾರ ಮತ್ತು ಮಸಾಲೆ ಇರುವುದರಿಂದ ಸೋಲ್ ಖಡಿ ಅವಶ್ಯಕ ಅನಿಸುತ್ತೆ. ಎರಡೆರಡು ಬ್ರೆಡ್ಡು ಮಿಸ್ಸಳ್ ನಲ್ಲಿ ಅದ್ದಿ ತಿಂದು ಹತ್ತು ನಿಮಿಷವಾಗಿರಲಿಲ್ಲ, ಒಂದು ಚಿಕ್ಕ ತಾಮ್ರದ ಬಕೇಟಿನಲ್ಲಿ ಮಿಸ್ಸಳ್ ತಂದಿಟ್ಟರು! ಮತ್ತೆ ಬ್ರೆಡ್ಡು ಬೇಕೇನು ಎಂದು ಕೇಳಿದ್ದಕ್ಕೆ, ನಾಲಿಗೆ ಮೆದುಳು ಆಗಲೇ ಒಂದು ಹಂತದಲ್ಲಿ ಏನೋ ತೀರ್ಮಾನಕ್ಕೆ ಬಂದಿದ್ದು, ನನ್ನ ಅನುಮತಿಯನ್ನು ಕಾಯದೆ ಕತ್ತು ತನ್ನಷ್ಟಕ್ಕೆ ತಾನೇ ಅಲ್ಲಾಡಿ ಬ್ರೆಡ್ಡು ಬೇಕು ಎಂದಿತ್ತು! ಆ ಖಾರಕ್ಕೆ ಕಣ್ಣಲ್ಲಿ ನೀರು ತುಂಬಿ ಬಂದರೂ ತಣ್ಣನೆಯ  ಸೋಲ್ ಖಡಿ ಆಗಾಗ  ಸ್ವಲ್ಪ ಸಮಾಧಾನಗೈಯುತ್ತಿತ್ತು! ಮಿಸ್ಸಳ್ ಪೂರ್ತಿ ಖಾಲಿಯಾದಾಗ ಮನಸ್ಸು, ಹೊಟ್ಟೆ ತುಂಬಿತ್ತು. 

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...