Monday, May 17, 2021

ಪುಸ್ತಕ: ಕೆಂಪು ಜುಟ್ಟಿನ ಹುಂಜ

 



ಪುಸ್ತಕ: ಕೆಂಪು ಜುಟ್ಟಿನ ಹುಂಜ

ಲೇಖಕ: ವಿಕ್ತರ್ ವಾಷ್ದಯೆವ್
ಚಿತ್ರಗಳು: ಕೆ. ಅವ್ಚಿನ್ನಿಕೊವ್
ಕನ್ನಡ ಅನುವಾದ: ಕೆ ಎಲ್ ಗೋಪಾಲಕೃಷ್ಣ ರಾವ್
ಪ್ರಕಾಶನ: ರಾದುಗ ಪ್ರಕಾಶನ, ಮಾಸ್ಕೋ

ಬಹುಶಃ ಇದು, ನಾನು ಓದಿದ ಮೊಟ್ಟ ಮೊದಲ ಮಕ್ಕಳ ಸಚಿತ್ರ ಪುಸ್ತಕ! ನಾನು ಹುಟ್ಟುವುದಕ್ಕೂ ಮೊದಲು ತಂದಿದ್ದು, ಅಣ್ಣ, ಅಕ್ಕ ಓದಿದ ನಂತರ ನನ್ನ ಬಾರಿ. ಇದರಲ್ಲಿರುವ ಚಿತ್ರಗಳು ಎಷ್ಟು ಆಕರ್ಷಕವಾಗಿವೆ ಎಂದರೆ, ನಾನು ಪ್ರತಿ ಬೇಸಿಗೆ ರಜೆಯಲ್ಲಿ ತಪ್ಪದೆ ಓದುತ್ತಿದ್ದೆ. ಈಗಲೂ ಈ ಪುಸ್ತಕ ಕಂಡಿತೆಂದರೆ ಚಿತ್ರಗಳನ್ನು ನೋಡುತ್ತ ಕುಳಿತು ಬಿಡುತ್ತೇನೆ. ಕಥೆಯಲ್ಲಿರುವ ಮಾಂತ್ರಿಕ ಅಜ್ಜಿ ತರಹ ನನ್ನ ಹತ್ತಿರವೂ ಸಿಹಿಗಡಬು ಕೊಡುವ ಬೀಸುವ ಕಲ್ಲು ಇತ್ತೆಂದರೆ ಎಂದು ಊಹಿಸಿಕೊಳ್ಳುತ್ತೇನೆ😃 
ಕತೆಯಲ್ಲಿ ಇಬ್ಬರು ಅನಾಥ ಮಕ್ಕಳು ಸಾಕಿದ ಕೆಂಪು ಜುಟ್ಟಿನ ಹುಂಜದ ಸಾಹಸಗಾಥೆ ಇದೆ. ಒಟ್ಟು ೨೦ ಪುಟಗಳು ಹಾಗೂ ೧೦ ವರ್ಣರಂಜಿತ ಚಿತ್ರಗಳಿವೆ.
ಈ ಪುಸ್ತಕದ ಬೆಲೆಯನ್ನು ನಮೂದಿಸಿಲ್ಲ. ಪುಸ್ತಕವನ್ನು ಯಾವುದೋ ಪುಸ್ತಕ ಮೇಳದಲ್ಲಿ ಕೊಂಡು ತಂದಿದ್ದಾರೆ ಅಂತ ತಂದೆಯವರು ಹೇಳಿದರು. 




Thursday, May 6, 2021

ಪುಸ್ತಕ:ರಂಗ ಕೈರಳಿ



 ಪುಸ್ತಕ:ರಂಗ ಕೈರಳಿ

ಲೇಖಕ: ಕಿರಣ್ ಭಟ್
ಬೆಲೆ: ೧೫೦
ಪ್ರಕಾಶನ: ಬಹುರೂಪಿ

ಪುಸ್ತಕವು ಕೇರಳದ ಪ್ರವಾಸ ಕಥನವಾಗಿದ್ದು, ತುಂಬಾ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಏಕೆಂದರೆ ಇದು ಎಲ್ಲ ಪ್ರವಾಸ ಕಥನಗಳಂತಿರದೆ ಸ್ವಲ್ಪ ವಿಶಿಷ್ಟವಾಗಿದ್ದು, ಲೇಖಕರ ನಾಟಕ ಪ್ರೀತಿಯಿಂದ ನಾಟಕಗಳನ್ನು ನೋಡುವ ಸಲುವಾಗಿ ಇಡೀ ಕೇರಳವನ್ನು ಪರಿಚಯಿಸುವ ಪರಿ ಸೊಗಸಾಗಿದೆ. ಅದಕ್ಕೇ ಪುಸ್ತಕದ ಹೆಸರು 'ರಂಗ ' ಕೈರಳಿ. ಕೇರಳವೆಂದರೆ ಓಣಂ ಅಥವಾ ಹಿನ್ನೀರಿನ ಹಡಗು ಮನೆ ಎಂದುಕೊಳ್ಳುವವರಿಗೆ ಈ ಪುಸ್ತಕ ಕೇರಳದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ಇದು ಅವಧಿ ಡಿಜಿಟಲ್ ಮ್ಯಾಗಝಿನ್ ಗೆ ಬರೆದ ಅಂಕಣಗಳ ಸಂಕಲನವೂ ಹೌದು. 
ಪುಸ್ತಕದಲ್ಲಿ ಕೇರಳದ ಪರಿಚಯದ ಜೊತೆ ಜೊತೆಗೆ ವಿವಿಧ ಪ್ರಕಾರದ ನಾಟಕಗಳ ಸಂಕ್ಷಿಪ್ತ ಪರಿಚಯವೂ ಇದೆ. ಚವಿಟ್ಟು ನಾಡಕಮ್ ಎನ್ನುವ ವಿಶಿಷ್ಟ ಬಗೆಯ ಹೆಜ್ಜೆ ಹಾಕುತ್ತ ಮಾಡುವ ನಾಟಕ, ಮೋಹಿನಿಯಾಟ್ಟಂ, ಕೇರಳ ಕಲಾಮಂಡಲಂ ಬಗ್ಗೆ ಬರೆದಿದ್ದು, ITFOK , ಓಟ್ಟಂತುಳ್ಳಲ್, ಕಥಕ್ಕಳಿ, ಅಟ್ಟಕಥಾ, ತೆಯ್ಯಮ್ ಹಾಗು ಹತ್ತು ಹಲವಾರು ನಾಟಕಗಳ ಕಥೆಯ ಚಿಕ್ಕ ವಿವರ. ನಾಟಕಪ್ರಿಯರಿಗಂತೂ ಇದು ಅಮೂಲ್ಯ ದಾಖಲೆಯ ಪುಸ್ತಕ. ಇಷ್ಟೆಲ್ಲಾ ಸಂಗತಿಗಳು ಇದ್ದರೂ ಲೇಖಕರು ಇನ್ನೂ ಭಾವನಾತ್ಮಕವಾಗಿ, ವಿವರವಾಗಿ ಬರೆದಿದ್ದರೆ ಅತ್ಯಾಕರ್ಷಕವಾಗಿರುತ್ತಿತ್ತು  ಎಂದೆನಿಸಿದ್ದು ಸುಳ್ಳಲ್ಲ. 
ಪುಸ್ತಕದ ಮುಖಪುಟ ತುಂಬಾ ಆಕರ್ಷಕವಾಗಿದ್ದು , ಅನ್ಯ ಪುಸ್ತಕಗಳಿಗೆ ಹೋಲಿಸಿದರೆ ಪುಸ್ತಕವು ಸ್ವಲ್ಪ ದೊಡ್ಡದೇ ಇದೆ. ಇಡೀ ಪುಸ್ತಕದಲ್ಲಿ ಸಾಕಷ್ಟು ಚಿತ್ರಗಳಿದ್ದು, ಪ್ರತಿ ಪುಟದ ಫೂಟರ್ ನಲ್ಲಿ ಒಂದು ಚಿತ್ರವಿದೆ! ಪರಿವಿಡಿಯನ್ನು ಸ್ಪಾಟ್ ಲೈಟ್ ಅಂತ ಉಲ್ಲೇಖಿಸಿದ್ದಾರೆ!
ಒಟ್ಟಾರೆ ಕೇರಳಕ್ಕೆ ಭೇಟಿ ನೀಡುವ ಮುನ್ನ ಈ ಪುಸ್ತಕ ಓದಿದ್ದರೆ ಖಂಡಿತವಾಗಿ ಒಂದೆರಡು ನಾಟಕ ನೋಡಿ ಬರುವ ಹಾಗೆ ಮನಸ್ಸು ಪರಿವರ್ತನೆಯಾಗುತ್ತದೆ

Saturday, May 1, 2021

ಮೋಹನಸ್ವಾಮಿ e-book

 



ಪುಸ್ತಕ:  ಮೋಹನಸ್ವಾಮಿ  e-book, MyLang app

ಲೇಖಕ: ವಸುಧೇಂದ್ರ 
ಬೆಲೆ: 119
ಪ್ರಕಾಶನ: ಛಂದ ಪ್ರಕಾಶನ
ಮುದ್ರಣ: 5, 2017

ಪುಸ್ತಕವು 12 ಕಥೆಗಳನ್ನು ಒಳಗೊಂಡಿದ್ದು ಎಲ್ಲವೂ ಮನಮುಟ್ಟುವಂತಿವೆ.  ವಿಭಿನ್ನ ಕಥಾವಸ್ತುಗಳನ್ನು ಹೊಂದಿದ್ದರೂ ಪುಸ್ತಕ ಜನಪ್ರಿಯಗೊಂಡಿದ್ದು  ಗೇ ಬಗ್ಗೆ ಬರೆದಿದ್ದರಿಂದ! ಹಾಗು ಈ ಕಥಾವಸ್ತುಗಳಿರುವ ಕಥೆಗಳು ತುಂಬಾ ಹೃದಾಯಾತ್ಮಕವಾಗಿ ಚಿತ್ರಿಸಲ್ಪಟ್ಟಿವೆ. ಉಳಿದ ಕಥೆಗಳಲ್ಲಿ ಕೆಲವು ಸಾಮಾಜಿಕ ಜಾಲತಾಣ ಬಗ್ಗೆ ಇದ್ದರೆ, ಇನ್ನುಳಿದವು ಸಹಜ ಉದ್ಯೋಗಸ್ಥ ಮಹಿಳೆಯ ಬಗ್ಗೆ. ಪುಸ್ತಕದಲ್ಲಿ ಒಂದು ಪೌರಾಣಿಕ ಕಥೆಯು ಇದ್ದು ದ್ರೌಪದಿಯ ಸ್ವಗತವನ್ನು ಚೆನ್ನಾಗಿ ಬಿಂಬಿಸಿದೆ. ತಗಣಿ ಕಥೆ ಕೂಡ ತುಂಬಾ ಮನಸ್ಸಿಗೆ ತಟ್ಟುವಂತದ್ದು. 
ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಜಗತ್ತು ಬರೆಯಲು ಹಿಂಜರಿಯುವ ಕಥೆಗಳನ್ನು ಲೇಖಕರು ಅದ್ಭುತವಾಗಿ ಬರೆದಿದ್ದಾರೆ. ಒಮ್ಮೆ ಓದಬೇಕಾದ ಪುಸ್ತಕ. 

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...